ಭಾರತೀಯತೆಯ ಸಂಕೇತವಾಗಿ ತಲೆ ಎತ್ತಲಿದೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ
ಕೃಪೆ : ರಾಷ್ಟ್ರೋತ್ಥಾನ ಪರಿಷತ್
2020ರ ಆಗಸ್ಟ್ 5ರಂದು ಭವ್ಯ ಶ್ರೀರಾಮಮಂದಿರ ನಿರ್ಮಾಣದ ಆರಂಭದ ಪೂಜಾಕಾರ್ಯ ನಡೆಯಲಿದೆ. ಸಾಮಾಜಿಕ ಸಮರಸದ, ರಾಷ್ಟ್ರೀಯ ಭಾವೈಕ್ಯ ಸಂಕೇತವಾಗಿ ರಾಷ್ಟ್ರದ ಮೂಲೆಮೂಲೆಗಳಿಂದ ತರಲಾದ ವಿವಿಧ ನದಿಗಳ ತೀರ್ಥಗಳು ಮತ್ತು ವಿವಿಧ ತೀರ್ಥಕ್ಷೇತ್ರಗಳ ಮೃತ್ತಿಕೆಗಳ ಪೂಜೆ-ಸಮರ್ಪಣೆ ನಡೆಯಲಿದೆ. ಇಡೀ ವಿಶ್ವವೇ ಶತಶತಮಾನಗಳಿಂದ ನಿರೀಕ್ಷಿಸುತ್ತಿದ್ದ ಅಮೃತಘಳಿಗೆ ಈಗ ಕೈಗೂಡಿಬಂದಿದೆ. ಕೊರೋನಾ ಕಾರಣದಿಂದಾಗಿ ರಾಮಭಕ್ತರು ಅಯೋಧ್ಯೆಗೆ ಬಂದು ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವೆಲ್ಲ ನಮ್ಮ ಮನೆಗಳಲ್ಲಿ ತಳಿರು-ತೋರಣಗಳಿಂದ ಅಲಂಕರಿಸಿ ಭಜನೆ, ಸಂಕೀರ್ತನೆ, ಜಪ, ಪೂಜೆ, ಪುಷ್ಪಾರ್ಚನೆ, ಧೂಪ, ದೀಪ, ನೈವೇದ್ಯಗಳಿಂದ ಶ್ರೀರಾಮನನ್ನು ಆರಾಧಿಸಿ, ಪ್ರಸಾದವನ್ನು ವಿತರಿಸುವ ಮೂಲಕ ಈ ಐತಿಹಾಸಿಕ ಘಟನೆಯಲ್ಲಿ ಭಾಗಿಗಳಾಗೋಣ. ಬೆಳಗ್ಗೆ 10.30ಕ್ಕೆ ದೂರದರ್ಶನದಲ್ಲಿ ನೇರಪ್ರಸಾರವಾಗುವ ಮಂದಿರ ನಿರ್ಮಾಣದ ಪೂಜಾಕಾರ್ಯಕ್ರಮವನ್ನು ವೀಕ್ಷಿಸೋಣ.
ಅಯೋಧ್ಯೆ : ಇದು ಸಕಲ ಹಿಂದುಗಳಿಗೆ ಪಾವನ ಕ್ಷೇತ್ರ. ಮಾತ್ರವಲ್ಲ ಮಾನವತೆಯ ಮೇರುಶಿಖರವೆನಿಸಿರುವ ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಳವಾಗಿ ಇಡೀ ವಿಶ್ವದ ಜನತೆಗೂ ಮಹತ್ವದ್ದೆನಿಸುವ ಮಂಗಳಮಯ ಭೂಮಿ. ಕಳೆದ ಕೆಲ ದಶಕಗಳಿಂದ ಭಾರತದಲ್ಲಿ ತಾಂಡವವಾಡುತ್ತಿರುವ ಜಾತ್ಯತೀತೆಯ ಹುಚ್ಚಿಗೆ ಬಲಿಯಾಗಿ ಶ್ರೀರಾಮನ ವ್ಯಕ್ತಿತ್ವವನ್ನೇ ಕುಬ್ಜಗೊಳಿಸಿ ಬರೀ ಕಾಲ್ಪನಿಕ ವ್ಯಕ್ತಿಯನ್ನಾಗಿಸುವ ಪ್ರಯತ್ನಗಳಲ್ಲಿ ಕೆಲವರು ನಿರತರಾಗಿದ್ದಾರೆ. ಮುಸ್ಲಿಂ ತುಷ್ಟೀಕರಣದ ರಾಜಕಾರಣಕ್ಕೆ ಬಲಿಯಾಗಿ ಆ ಮಹಾಪುರುಷ ತನ್ನ ಜನ್ಮಸ್ಥಳದಲ್ಲಿಯೇ ಸಣ್ಣ ಟೆಂಟಿನಲ್ಲಿ ಪೂಜೆಗೊಳ್ಳಬೇಕಾದ ಸ್ಥಿತಿ ಬಂದಿತ್ತು. ಹಾಗೆ ನೋಡಿದರೆ ಬೃಹತ್ ದೇವಾಲಯವೊಂದು ರಾಮಜನ್ಮಸ್ಥಾನದಲ್ಲಿರಬೇಕೆಂದು ಇಂದಿನ ರಾಜಕೀಯ ಪಕ್ಷಗಳ ಅಥವಾ ಹಿಂದು ಸಂಘಟನೆಗಳ ಕಲ್ಪನೆಯಲ್ಲ. ಯುಗಯುಗಗಳಿಂದ ಶ್ರೀರಾಮನ ಭವ್ಯಮಂದಿರ ಅಲ್ಲಿ ಇತ್ತು. ಮತ್ತು ಕಾಲಕಾಲಕ್ಕೆ ಅದು ನವೀಕರಣಗೊಂಡು ರಾಮಭಕ್ತರ ಪ್ರೇರಣಾ ಕೇಂದ್ರವಾಗಿ ಕಂಗೊಳಿಸುತ್ತಿತ್ತು. ರಾಷ್ಟ್ರೀಯತೆಯ ಅಸ್ಮಿತೆಯಾಗಿ ರೂಪುಗೊಂಡಿತ್ತು. ಮತ್ತೊಮ್ಮೆ ಆ ಭವ್ಯತೆಯನ್ನು ತರಲೆಂದೇ ಈಗಿನ ಪ್ರಯತ್ನಗಳು.
ಅಯೋಧ್ಯೆ ವಿಶ್ವದ ಅತ್ಯಂತ ಶೌರ್ಯವಂತ ರಾಜರು ಆಳಿದ ಕೋಸಲ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ಪ್ರದೇಶ. ಇಕ್ಷ್ವಾಕುವಂಶ, ಸೂರ್ಯವಂಶ ಅಥವಾ ರಘುವಂಶವೆಂದು ಕರೆಯಲ್ಪಟ್ಟ ಈ ವಂಶದ ರಾಜರು ಒಬ್ಬರಿಗಿಂತ ಒಬ್ಬರು ಪರಾಕ್ರಮಶಾಲಿಗಳು, ಪರೋಪಕಾರಿಗಳು. ಸಗರ, ಭಗೀರಥ, ಸತ್ಯಹರಿಶ್ಚಂದ್ರ, ದಿಲೀಪ ಮುಂತಾದವರು ಸಿಂಹಾಸನವನ್ನಲಂಕರಿಸಿದ್ದ ಸಾಮ್ರಾಜ್ಯವಿದು. ಶ್ರೀರಾಮನ
ಕಾಲಕ್ಕೂ ಹಿಂದಿನಿಂದ ಇಲ್ಲಿಯವರೆಗೂ ಅಯೋಧ್ಯೆಯೆಂಬ ಜಾಗವನ್ನು ಸರಿಯಾಗಿಯೇ ಗುರುತಿಸಿಕೊಂಡು ಬರಲಾಗಿದೆ. ಅನೇಕ ಬಾರಿ ಇಡೀ ಪಟ್ಟಣವೇ ಪುನರ್ನಿರ್ಮಾಣಗೊಂಡಿರುವ ಕುರುಹುಗಳು ಕಂಡುಬಂದಿವೆ. ಉತ್ಖನನದ ಸಮಯದಲ್ಲಿ ಅನೇಕ ಪದರಗಳಲ್ಲಿ ಒಂದರ ಮೇಲೊಂದರಂತೆ ವಿವಿಧ ಕಾಲಘಟ್ಟದ ಕಟ್ಟಡಗಳು ಭೂಮಿಯೊಳಗೆ ಸೇರಿಕೊಂಡಿರುವುದನ್ನು ಪತ್ತೆಹಚ್ಚಲಾಗಿದೆ.
ಅಯೋಧ್ಯೆಯ ಸಾಕ್ಷಿಗಳು ಈ ಸ್ಥಳದ ಬಗ್ಗೆ ಇರುವ ನಂಬಿಕೆಗಳನ್ನು ದೃಢಪಡಿಸಿವೆ. ಇದರೊಟ್ಟಿಗೆ ಶ್ರೀರಾಮನೂ ಈ ನೆಲದಲ್ಲಿ ಜನಿಸಿ, ಜೀವಿಸಿದ ಐತಿಹಾಸಿಕ ಪುರುಷ ಎಂಬುದೂ ದೃಢಪಟ್ಟಿದೆ. ರಾಮಾಯಣದಲ್ಲಿ ಅನೇಕ ಪ್ರಮುಖ ಸಂದರ್ಭಗಳಲ್ಲಿ ಉಲ್ಲೇಖಗೊಂಡಿರುವ ವಿವಿಧ ನಕ್ಷತ್ರಗಳ, ಗ್ರಹಸ್ಥಾನಗಳ ಆಧಾರದ ಮೇಲೆ ಇದರ ಕಾಲವನ್ನೂ ನಿರ್ಣಯಿಸುವ ಪ್ರಯತ್ನಗಳು ತಜ್ಞರಿಂದ ನಡೆದಿದೆ. ಇವೆಲ್ಲವೂ ಸಹಸ್ರಾರು ವರ್ಷಗಳ ಇತಿಹಾಸವನ್ನೇ ಸಾರಿ ಹೇಳುತ್ತವೆಯೇ ಹೊರತು ಬರೀ ಶಾಸನ, ದಾಖಲೆಗಳ ಕಾಲದ ಇರುವಿಕೆಯನ್ನಲ್ಲ.
ಇತಿಹಾಸದಲ್ಲಿ
ಜೈನರ ಪ್ರಮುಖ ಐದು ಜನ ತೀರ್ಥಂಕರರು ಹುಟ್ಟಿದ್ದು ಸಹ ಅಯೋಧ್ಯೆಯಲ್ಲೇ. ಕಾಳಿದಾಸ ರಘುವಂಶ ಕಾವ್ಯ ಬರೆದದ್ದು ಇಲ್ಲಿಯೇ. ಬೌದ್ಧಸಾಹಿತ್ಯದಲ್ಲಿ ಸಾಕೇತ್ ಎಂದು ಉಲ್ಲೇಖಗೊಂಡಿರುವ ಪ್ರದೇಶವೇ ಅಯೋಧ್ಯೆ. ರಾಮನನ್ನು ಸಾಕೇತರಾಮ ಎಂದೂ ಅನೇಕ ಭಕ್ತಿಗೀತೆಗಳಲ್ಲಿ ಕರೆಯಲಾಗಿದೆ. ಕ್ರಿ.ಪೂ. 249ರಲ್ಲಿ ಸಾಮ್ರಾಟ್ ಅಶೋಕ ಲುಂಬಿಣಿಯಲ್ಲಿ ನಿಲ್ಲಿಸಿದ ಸ್ತಂಭದ ಮೇಲಿನ ಶಾಸನ ಶ್ರೀರಾಮ ಮತ್ತು ಬುದ್ಧ ಇಲ್ಲಿಗೆ ಭೇಟಿ ನೀಡಿದ್ದರು ಎಂದಿದೆ. ಶ್ರೀರಾಮನ ಐತಿಹಾಸಿಕತೆಗೆ ಇದು ಸಾಕ್ಷಿ.
ಅಕ್ಬರ್ ವಿರುದ್ಧ ಹೋರಾಡಿದ ಮಹಾರಾಣಾ ಪ್ರತಾಪ ಸಹ ಶ್ರೀರಾಮನ ಇಕ್ಷ್ವಾಕು ವಂಶಜನೇ. ಸಿಖ್ ಪಂಥದ ಸ್ಥಾಪಕರಾದ ಗುರುನಾನಕರು ತಾನು ರಾಮನ ಮಗನಾದ ಕುಶನ ವಂಶಕ್ಕೆ (ವೇದಿ ವಂಶ) ಸೇರಿದವರೆಂದೂ, ಗುರುಗೋವಿಂದ ಸಿಂಗರು ತಾವು ಲವನು ಮೂಲಪುರುಷನಾಗಿರುವ ಸೋಧಿ ವಂಶಕ್ಕೆ ಸೇರಿದವನೆಂದು ತಿಳಿಸಿದ್ದಾರೆ. ಪ್ರಾಚೀನ ಕಾಲದಿಂದಲೂ ಇಲ್ಲೊಂದು ದೇವಾಲಯವನ್ನು ಶ್ರೀರಾಮನಿಗಾಗಿ ಕಟ್ಟಲ್ಪಟ್ಟಿತ್ತು. ಇತಿಹಾಸದ ಪ್ರಕಾರ, ಕುಶನು ಕಟ್ಟಿಸಿದ ಶ್ರೀರಾಮದೇಗುಲವನ್ನು ರಾಜಾ ವಿಕ್ರಮಾದಿತ್ಯನು ಜೀರ್ಣೋದ್ಧಾರಗೊಳಿಸಿ ಭವ್ಯ ದೇವಾಲಯವನ್ನು ನಿರ್ಮಿಸಿದ್ದನು.
ಇವು ಕೆಲ ಉದಾಹರಣೆಯಷ್ಟೇ. ಭಾರತದ ಎಲ್ಲ ಪ್ರದೇಶಗಳಲ್ಲೂ ರಾಮನ ವಂಶಜರೆಂದು ಗುರುತಿಸಲ್ಪಟ್ಟವರ ಆಳ್ವಿಕೆ ನಡೆದ ಸಂಗತಿಗಳು ದಾಖಲಾಗಿವೆ. ಶ್ರೀರಾಮ ಚಾರಿತ್ರಕ ವ್ಯಕ್ತಿಯೆಂಬುದಕ್ಕೆ ಈ ಆಧಾರಗಳೇ ಸಾಕು.
ಬಾಬರ್ ದುರಾಕ್ರಮಣ
1527ರಲ್ಲಿ ರಾಣಾ ಸಂಗ್ರಾಮ ಸಿಂಹನನ್ನು ಸೋಲಿಸಿದ ಬಳಿಕ ಬಾಬರ್ಗೆ ಬಲವಾದ ಎದುರಾಳಿ ಉತ್ತರ ಭಾರತದಲ್ಲಿ ಇಲ್ಲವಾಯಿತು. ದೇವಾಲಯ ಧ್ವಂಸ, ಐಶ್ವರ್ಯದ ಲೂಟಿಗಳು ತಡೆಯಿಲ್ಲದಂತೆ ನಡೆದವು. ಆತನ ಸೇನಾಪತಿ ಮೀರ್ಬಾಕಿ ಅಯೋಧ್ಯೆಯತ್ತ ನುಗ್ಗಿ ಬಂದ. ತನ್ನ ಮತೀಯ ಉನ್ಮಾದದಿಂದ ಹಿಂದುಗಳ ತೀವ್ರ ಪ್ರತಿರೋಧ ಹೋರಾಟದ ನಡುವೆಯೂ ಶ್ರಿರಾಮಜನ್ಮಭೂಮಿಯಲ್ಲಿದ್ದ ದೇವಾಲಯವನ್ನು ಧ್ವಂಸಗೊಳಿಸಿ ಮಸೀದಿಯನ್ನು ನಿರ್ಮಿಸಿದ. ಅದಕ್ಕೆ ತನ್ನ ಒಡೆಯ ಬಾಬರ್ನ ಹೆಸರಿಟ್ಟ ಎಂದು ಹೇಳಲಾಗುತ್ತಿದ್ದರೂ, 1940ರವರೆಗೂ ಅದನ್ನು ಜನ್ಮಸ್ಥಾನ್ ಮಸ್ಜಿದ್ಎಂದೇ ಕರೆಯಲಾಗುತ್ತಿತ್ತು. ಅನಂತರ ಅಯೋಧ್ಯೆಯೆಂಬ ಸಂಸ್ಥಾನದ ಹೆಸರು ಅವಧ್ ಎಂದೂ, ನಂತರ ಔಧ್ ಎಂದೂ ಕರೆಯಲ್ಪಡುತ್ತಿತ್ತು. ಆಡಳಿತಾತ್ಮಕವಾಗಿ ಅಯೋಧ್ಯೆ ಊರು ಫೈಜಾಬಾದ್ ಜಿಲ್ಲೆಗೆ ಸೇರಿತು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸಂಕಲ್ಪದಿಂದ ಇದೀಗ ಇಡೀ ಜಿಲ್ಲೆಗೆ ಅಯೋಧ್ಯಾ ಎಂದು ಮರುನಾಮಕರಣ ಮಾಡಲಾಗಿದೆ.
Image may be NSFW.
Clik here to view.
ನಿಲ್ಲದ ಸಂಘರ್ಷ
ದೇಗುಲಗಳ ಪಟ್ಟಣವಾಗಿದ್ದ ಅಯೋಧ್ಯೆಯಲ್ಲಿನ ಅನೇಕ ದೇವಾಲಯಗಳು ಮುಸಲ್ಮಾನರ ಆಳ್ವಿಕೆಯಲ್ಲಿ ನಾಶಗೊಂಡವು. ಕೆಲವು ದೇವಾಲಯಗಳನ್ನು ಹಿಂದುಗಳೂ ಮರೆತರು. ಆದರೂ ಜನ್ಮಸ್ಥಾನದ ದೇಗುಲದ ನೆನಪನ್ನು ಮಾತ್ರ ಹಿಂದೂ ಸಮಾಜ ಎಂದೆಂದಿಗೂ ಮರೆಯದೇ ಉಳಿಸಿಕೊಂಡು ಬಂದಿದೆ, ಮಾತ್ರವಲ್ಲ ಅದನ್ನು ಹಿಂಪಡೆಯಲು ನಿರಂತರ ಸಂಘರ್ಷಗಳನ್ನು ಮಾಡುತ್ತಲೇ ಇತ್ತು. ಇತಿಹಾಸಕಾರರ ಪ್ರಕಾರ, ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ಮೇಲೆದ್ದ ದಿನದಿಂದ ಇಲ್ಲಿಯವರೆಗೂ ಶ್ರೀರಾಮಜನ್ಮಸ್ಥಾನವನ್ನು ಮರಳಿ ಪಡೆಯಲು ಸರಿಸುಮಾರು 80 ಯುದ್ಧಗಳಾಗಿವೆ. 3 ಲಕ್ಷಕ್ಕೂ ಹೆಚ್ಚು ಹಿಂದುಗಳ ಬಲಿದಾನವಾಗಿದೆ. ಅನೇಕ ಬಾರಿ ಆ ಪ್ರದೇಶ ಹಿಂದುಗಳ ವಶಕ್ಕೂ ಬಂದಿದೆ. ಅಲ್ಲಿನ ನವಾಬನಿಗೆ ಬೇರೆ ಭೂಮಿ ಅಥವಾ ಹಣಕೊಟ್ಟು ಆ ಪ್ರದೇಶವನ್ನು ತೆಗೆದುಕೊಳ್ಳುವ ಪ್ರಯತ್ನವೂ ನಡೆದಿದೆ. ಒಟ್ಟಿನಲ್ಲಿ ಹಿಂದೂಗಳ ಜನಮನದಿಂದ ಶ್ರೀರಾಮದೇಗುಲದ ಸಂಗತಿ ಎಂದೂ ದೂರವಾಗಲಿಲ್ಲ.
ಗೋಡೆ ಕಟ್ಟಿದ ಬ್ರಿಟಿಷರು
1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಆಗ ಮುಸಲ್ಮಾನರ ನಾಯಕನಾಗಿದ್ದ ಅಮಿರ್ ಅಲಿ ಇಡೀ ಮಂದಿರ ಸಂಕೀರ್ಣವನ್ನು ಹಿಂದೂಗಳಿಗೆ ಬಿಟ್ಟುಕೊಡಲು ನಿರ್ಧರಿಸಿದ್ದ. ಆದರೆ ದುರದೃಷ್ಟವಶಾತ್ ಯುದ್ಧದಲ್ಲಿ ಬ್ರಿಟಿಷರು ಗೆದ್ದರು. ಸಮಸ್ಯೆ ಮತ್ತೆ ಜಟಿಲವಾಯಿತು. ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಬಲವಾದಂತೆ ಅಯೋಧ್ಯೆಯಲ್ಲಿ ನಿರಂತರ ನಡೆಯುತ್ತಿದ್ದ ಸಂಘರ್ಷಗಳನ್ನು ತಪ್ಪಿಸಲು ವಿವಾದಿತ ಮೂರು ಗುಮ್ಮಟ ಮತ್ತು ಶ್ರೀರಾಮ ಚಬೂತರ (ವಿವಾದಿತ ಕಟ್ಟಡದ ಆವರಣಕ್ಕೆ ಹೊಂದಿಕೊಂಡಂತಿದ್ದ ಜಗುಲಿ) ಮಧ್ಯೆ ಬಲವಾದ ಗೋಡೆಯನ್ನು ನಿರ್ಮಿಸಿದರು. ಆಗಲೂ ನಿತ್ಯ ಪೂಜೆ ಅರ್ಚನೆ ಶ್ರೀರಾಮನಿಗೆ ನಡೆಯುತ್ತಲೇ ಇತ್ತು.
ಅಯೋಧ್ಯೆಯಲ್ಲಿ ಗೋಹತ್ಯೆ
1857ರ ಸಮಯದಲ್ಲಿ ಮುಸಲ್ಮಾನರಲ್ಲಿ ಮೂಡಿದ್ದ ಸೌಹಾರ್ದತೆಯ ಭಾವನೆಯನ್ನು ನಾಶಗೊಳಿಸುವುದರಲ್ಲಿ ಮೂಲಭೂತವಾದಿ ಮೌಲ್ವಿಗಳು ಯಶಸ್ವಿಯಾದರು. ಬ್ರಿಟಿಷ ಅಧಿಕಾರಿಗಳ ಕುಮ್ಮಕ್ಕೂ ಇತ್ತು. ಇದರಿಂದಾಗಿ ಆಗಾಗ ಅಯೋಧ್ಯೆಯಲ್ಲಿ ಸಂಘರ್ಷ, ದೊಂಬಿ, ಚಿಕ್ಕಪುಟ್ಟ ಹೋರಾಟಗಳು ನಡೆಯತ್ತಲೇ ಇದ್ದವು. 1934ರಲ್ಲಿ ಅಯೋಧ್ಯೆಯ ಮುಸಲ್ಮಾನರು ಹಿಂದುಗಳನ್ನು ಕೆಣಕಲೆಂದೇ ಸಾರ್ವಜನಿಕವಾಗಿ ಗೋವನ್ನು ಕಡಿದರು. ಹಿಂದೂ ಸಮಾಜ ಇದರಿಂದ ಸಿಡಿದೆದ್ದಿತು. ಗೋಹಂತಕರು ಕೊಲೆಯಾದರು. ಉಗ್ರಾವತಾರ ತಾಳಿದ ಹಿಂದು ಯುವಕರು ವಿವಾದಿತ ಪ್ರದೇಶಕ್ಕೆ ನುಗ್ಗಿ ಮೂರೂ ಗುಂಬಜ್ಗಳ ಮೇಲೇರಿ ಬಹಳ ಹಾನಿಯನ್ನುಂಟು ಮಾಡಿದರು. ಬ್ರಿಟಿಷರು ಭಾರಿ ಬಲಪ್ರಯೋಗದಿಂದ ಹಿಂದುಗಳನ್ನು ಚದುರಿಸಿದರು. ಈ ಹೋರಾಟದ ನಂತರ ಮುಸಲ್ಮಾನರು ಈ ಕಟ್ಟಡಕ್ಕೆ ಕಾಲಿಡಲೇ ಇಲ್ಲ.
ಈ ವಿವಾದ ಜೀವಂತವಾಗಿರಲೆಂದು ಬಯಸಿದ ಫೈಜಾಬಾದಿನ ಕಲೆಕ್ಟರ್ ನಿಕಲ್ಸನ್ ಹಿಂದೂಗಳಿಂದ ಪುಂಡಗಂದಾಯ ಸಂಗ್ರಹಿಸಿ ಗುಂಬಜ್ಗಳಿಗೆ ಆಗಿದ್ದ ಹಾನಿಯನ್ನು ಸರಿಪಡಿಸಿದ. ಹೀಗಾಗಿ ಒಂದು ರೀತಿಯಲ್ಲಿ ಇದು ಬ್ರಿಟಿಷರು ಮರುನಿರ್ಮಿಸಿದ ಕಟ್ಟಡ. ಆದರೂ ಇಡೀ ಪ್ರದೇಶವು ಹಿಂದುಗಳ ಪ್ರವೇಶ ಹಾಗೂ ವಿವಾದಿತ ಕಟ್ಟಡದ ಹೊರಗೆ ರಾಮಚಬೂತರದಲ್ಲಿ ಅಡೆತಡೆಯಿಲ್ಲದೆ ವಿಗ್ರಹಗಳ ಪೂಜೆ ಪುನಸ್ಕಾರಗಳು ಸಾಗಿದ್ದವು.
ಸೋಮನಾಥನ ಸ್ಫೂರ್ತಿ – ಅಡಿಯಿಟ್ಟ ರಾಮಲಲ್ಲಾ
ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸೋಮನಾಥ ದೇವಾಲಯವನ್ನು ಪುನರ್ನಿರ್ಮಿಸುವುದಾಗಿ ಸರ್ದಾರ್ ಪಟೇಲ್ ಮುಂತಾದವರು ಘೋಷಿಸುತ್ತಿದ್ದಂತೆ ಶ್ರೀರಾಮಜನ್ಮಸ್ಥಾನದಲ್ಲಿಯೂ ಭವ್ಯ ದೇಗುಲ ನಿರ್ಮಿಸಿಬೇಕೆಂಬ ಕೂಗು ಎದ್ದಿತು. ಸಾಧುಸಂತರ ಬಹುಕಾಲದ ಆಸೆ ಮತ್ತೊಮ್ಮೆ ಚಿಗುರಿತು. 1948ರಲ್ಲಿ ಗೋರಕ್ಷಾ ಪೀಠದ ವಿಜಯನಾಥರು ಸರ್ಕಾರದೊಂದಿಗೆ ಈ ಕುರಿತು ಪತ್ರವ್ಯವಹಾರ ಆರಂಭಿಸಿದರು.
1949ರ ಡಿಸೆಂಬರ್ 23ರಂದು ಗುಂಬಜ್ ಇರುವ ವಿವಾದಿತ ಕಟ್ಟಡದಲ್ಲಿ ಬಾಲರಾಮನ ಪುಟ್ಟ ವಿಗ್ರಹ ಕಾಣಿಸಿಕೊಂಡಿತು. ಹಿಂದೂ ಜನಮಾನಸದಲ್ಲಿ ಉತ್ಸಾಹದ ಬುಗ್ಗೆಯೆದ್ದಿತು. ದೇಶದ ಮೂಲೆಮೂಲೆಗಳಿಂದ ರಾಮಭಕ್ತರು ರಾಮಲಲ್ಲಾನ ದರ್ಶನಕ್ಕೆ ಧಾವಿಸಿದರು. ಸರ್ಕಾರಕ್ಕೆ ಮುಖಭಂಗವಾಗತೊಡಗಿತು. ನೆಹರೂ ನೇತೃತ್ವದ ಸರ್ಕಾರ ಕುಪಿತಗೊಂಡು ಆಗಿನ ಉತ್ತರಪ್ರದೇಶ ಸರ್ಕಾರದ ಮೇಲೆ ಒತ್ತಡ ಹಾಕಿ ಅಲ್ಲಿಂದ ಶ್ರೀರಾಮನ ವಿಗ್ರಹವನ್ನು ತೆಗೆಯಲು ಪ್ರಯತ್ನಿಸಿತು. ಆದರೆ ಜಾಗೃತ ಹಿಂದೂ ಶಕ್ತಿಯನ್ನು ಕಂಡು ಈ ಸಾಹಸಕ್ಕೆ ಅವರು ಕೈಹಾಕಲಿಲ್ಲ. ಅಂದಿನಿಂದ ಆರಂಭಗೊಂಡ ರಾಮಲಲ್ಲಾನ ಪೂಜೆ ನಿರಂತರ ನಡೆದುಕೊಂಡೇ ಬಂದಿದೆ. ಭಕ್ತರಿಗೆ ಮಾತ್ರ ವಿವಾದಿತ ಕಟ್ಟಡದೊಳಗೆ ಪ್ರವೇಶಿಸದಂತೆ ನಿರ್ಬಂಧ ಹಾಕಿ ಬಾಗಿಲಿನ ಹೊರಗಿನಿಂದಲೇ ಸರಳುಗಳ ಮೂಲಕ ಶ್ರೀರಾಮಚಂದ್ರನ ದರ್ಶನ ಮಾಡುವಂತೆ ಗೇಟುಗಳನ್ನು ನಿರ್ಮಿಸಲಾಗಿತ್ತು.
ಕಾರಸೇವೆಯಿಂದ ತಾತ್ಕಾಲಿಕ ಮಂದಿರ ನಿರ್ಮಾಣ
1980ರ ದಶಕದಲ್ಲಿ ರಾಮಜನ್ಮಭೂಮಿಯ ವಿಮೋಚನೆಗಾಗಿ ಆಗ್ರಹ ಇನ್ನಷ್ಟು ಪ್ರಬಲವಾಯಿತು. ವಿಶ್ವ ಹಿಂದೂ ಪರಿಷತ್ ಮತ್ತಿತರ ಸಂಘಟನೆಗಳ ನೇತೃತ್ವದಲ್ಲಿ ಅನೇಕ ಸಮ್ಮೇಳನಗಳು, ಸಭೆ-ಧರ್ಮಸಂಸತ್ತುಗಳು, ರಥಯಾತ್ರೆಗಳು ನಡೆದವು. ತಾಲಾ ಖೋಲೋ ಚಳುವಳಿಯಿಂದಾಗಿ 1986ರ ಫೆಬ್ರುವರಿ 1ರಂದು ರಾಮಲಲ್ಲಾನ ದರ್ಶನಕ್ಕೆ ಅವಕಾಶ ದೊರೆಯಿತು. ಇದನ್ನು ಸಹಿಸದ ಕೆಲವು ಮುಸ್ಲಿಂ ನೇತಾರರು ಬಾಬ್ರಿ ಮಸೀದಿ ಕ್ರಿಯಾ ಸಮಿತಿಯನ್ನು ಹುಟ್ಟುಹಾಕಿ ಪ್ರತಿಭಟನೆ ಆರಂಭಿಸಿದರು. ಬಾಬ್ರಿ ಮಸೀದಿ ಎನ್ನುವ ನಾಮಕರಣವೂ ಆಯಿತು.
ರಾಮಜನ್ಮಭೂಮಿಯ ಜೀರ್ಣೋದ್ಧಾರಕ್ಕೆ ಆಗ್ರಹಿಸಿ ಶ್ರೀರಾಮ ಜ್ಯೋತಿ ಯಾತ್ರೆ, ಶಿಲಾಪೂಜನ, ಶಿಲಾನ್ಯಾಸಗಳು ನಡೆದವು. 1990ರಲ್ಲಿ ಕಾರಸೇವೆಗಾಗಿ ಲಕ್ಷೋಪಲಕ್ಷ ಜನ ಅಯೋಧ್ಯೆಗೆ ಹೊರಟರು. ಮುಲಾಯಂ ಸಿಂಗ್ ನೇತೃತ್ವದ ಅಂದಿನ ಉತ್ತರಪ್ರದೇಶ ಸರ್ಕಾರ ಕಾರಸೇವಕರನ್ನು ಬಂಧಿಸಿ ಚಳುವಳಿಯನ್ನು ಹತ್ತಿಕ್ಕುವ ಎಲ್ಲ ಪ್ರಯತ್ನ ಮಾಡಿತು. ಅಂದು ಬಂಧಿತರಾದವರು (ಸರ್ಕಾರದ ಅಂಕಿಅಂಶದಂತೆ) 1.8 ಲಕ್ಷ ಮಂದಿ. ಆದರೂ ಕಾರಸೇವೆ ನಡೆಯಿತು. ಉತ್ಸಾಹೀ ಕಾರಸೇವಕರು ಗುಂಬಜದ ಮೇಲೆ ಭಗವಾಧ್ವಜವನ್ನು ಹಾರಿಸಿಯೇಬಿಟ್ಟರು.
ಅನಂತರ ಅಧಿಕಾರಕ್ಕೆ ಬಂದ ಬಿಜೆಪಿಯ ಕಲ್ಯಾಣಸಿಂಗ್ ಸರ್ಕಾರ ವಿವಾದಿತ 2.77 ಎಕರೆ ಸಮೀಪ 67 ಎಕರೆ ಪ್ರದೇಶವನ್ನು ರಾಮಕಥಾ ಪಾರ್ಕ್ ನಿರ್ಮಾಣಕ್ಕೆ ರಾಮ ಜನ್ಮಭೂಮಿ ನ್ಯಾಸಕ್ಕೆ ನೀಡಿದರು. 1992ರಲ್ಲಿ ನಡೆದ ಎರಡನೇ ಸುತ್ತಿನ ಕಾರಸೇವೆಗೆ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ರಾಮಭಕ್ತರು ಅಯೋಧ್ಯೆಯತ್ತ ಧಾವಿಸಿದರು. ಹಿಂದೂಸಮಾಜದ ಕ್ಷಾತ್ರಶಕ್ತಿ ಸಿಡಿದೆದ್ದಿದ್ದರ ಪರಿಣಾಮವಾಗಿ 1992 ಡಿಸೆಂಬರ್ 6ರಂದು ದೇಶದ ಸ್ವಾಭಿಮಾನದ ಮೇಲೆ ಕಳಂಕದಂತಿದ್ದ ಕಟ್ಟಡ ನೆಲಸಮವಾಯಿತು. ಶ್ರೀರಾಮನಿಗೆ ಒಂದು ತಾತ್ಕಾಲಿಕ ದೇಗುಲ ನಿರ್ಮಾಣವಾಗಿ ಪೂಜೆ ಆರಂಭವಾಯಿತು.
Image may be NSFW.
Clik here to view.
ಕಾನೂನು ಸಂಘರ್ಷ
1950-60ರ ದಶಕಗಳಲ್ಲಿ ರಾಮಭಕ್ತ ಗೋಪಾಲ ಸಿಂಗ್ ವಿಶಾರದ, ನಿರ್ಮೋಹಿ ಅಖಾಡಾ, ಸುನ್ನಿ ವಕ್ಫ್ ಬೋರ್ಡ್ ಮೊದಲಾದವರಿಂದ ನ್ಯಾಯಾಲಯದಲ್ಲಿ ವಿವಾದಿತ ಜಾಗದ ವಶಕ್ಕಾಗಿ ಖಟ್ಲೆಗಳು ದಾಖಲೆಗೊಂಡವು. ಅಂದಿನಿಂದ 2019ರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನವರೆಗೆ ವಿವಿಧ ಕೋರ್ಟುಗಳಲ್ಲಿ ವಿಚಾರಣೆ ನಡೆಯುತ್ತ ಬಂದಿದೆ. ವಿವಾದವನ್ನು ಪರಿಹರಿಸಲು ಅನೇಕ ಪ್ರಯತ್ನಗಳು ನ್ಯಾಯಾಲಯದ ಒಳಗೆ ಮತ್ತು ಹೊರಗೆ ನಡೆದವು.
ಕೇಂದ್ರ ಸರ್ಕಾರವು ಆ ಜಾಗದಲ್ಲಿ ಮೊದಲು ಮಂದಿರವಿತ್ತು ಎಂದು ಸಾಬೀತಾದರೆ ಜಾಗವನ್ನು ಹಿಂದೂಗಳಿಗೆ ನೀಡುವ ವಾಗ್ದಾನ ನೀಡಿ 1994ರಲ್ಲಿ ನ್ಯಾಯಾಯಲಕ್ಕೆ ಅಫಿಡವಿಟ್ ಸಲ್ಲಿಸಿತು. ನ್ಯಾಯಾಯಲಯದ ಆದೇಶದಂತೆ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ಹಿಂದೆ ಅಲ್ಲಿ ಭವ್ಯ ಮಂದಿರವಿತ್ತು ಎನ್ನುವುದೂ ಸಾಬೀತಾಗಿದೆ. ಇದನ್ನು 2010ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪಿನಲ್ಲಿ ಎತ್ತಿ ಹಿಡಿದಿದೆ. ಮತ್ತು ಮಂದಿರದ ಅವಶೇಷದ ಮೇಲೆ ಮಸೀದಿಯನ್ನು ನಿರ್ಮಿಸಲಾಗಿತ್ತು ಎಂದಿದೆ. ಈ ತೀರ್ಪಿನಲ್ಲಿ ವಿವಾದಿತ 2.77 ಎಕರೆ ಜಾಗವನ್ನು ಮೂರು ಭಾಗ ಮಾಡಿ ರಾಮಲಲ್ಲಾ, ನಿರ್ಮೋಹಿ ಅಖಾಡಾ ಮತ್ತು ಸುನ್ನಿ ವಕ್ಫ್ ಬೋರ್ಡ್ಗೆ ಸಮನಾಗಿ ಹಂಚಿತು. ಈ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಯಿತು. ಅನೇಕ ತೊಡಕುಗಳು ಮತ್ತು ಸುದೀರ್ಘ ವಿಚಾರಣೆಯ ನಂತರ ಸರ್ವೋಚ್ಚ ನ್ಯಾಯಾಲಯವು 2019ರಲ್ಲಿ ರಾಮಜನ್ಮಭೂಮಿ ವಿವಾದಕ್ಕೆ ಶಾಶ್ವತವಾಗಿ ತೆರೆ ಎಳೆಯಿತು. ಭವ್ಯ ರಾಮಮಂದಿರ ನಿರ್ಮಾಣಕ್ಕೆ ಅಗತ್ಯ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸೂಚಿಸಿತು.
ಮಂದಿರ ರಾಷ್ಟ್ರೀಯ ಅಸ್ಮಿತೆಯ ಪ್ರತೀಕ
ದಶಕಗಳ ಕಾಲ ನ್ಯಾಯಾಲಯದ ಪ್ರಕ್ರಿಯೆಯನ್ನು ಶಾಂತವಾಗಿ ವೀಕ್ಷಿಸುತ್ತಾ ಹಿಂದೂಸಮಾಜವು ಕಾದಿದೆ. ನಡುನಡುವೆ ಬಂದ ಮಧ್ಯಂತರ ವಿಚಿತ್ರ ತೀರ್ಪುಗಳನ್ನು ಭಾರತೀಯ ಜನತೆ ಸಹನೆಯಿಂದ ಕೇಳಿದೆ. ಮಧ್ಯಸ್ಥಿಕೆ ವಹಿಸಲೆಂದು ಬಂದರೂ ತಿರಸ್ಕರಿಸದೇ ಶಾಂತಿಯ ಸಹಬಾಳ್ವೆಗೆ ನಮ್ಮ ಆದ್ಯತೆ ಎಂಬುದನ್ನು ಹಿಂದೂ ಸಂಘಟನೆಗಳು ತೋರಿಸಿಕೊಟ್ಟಿವೆ. ಆದರೆ ಈ ಸಹಬಾಳ್ವೆ ಸತ್ಯದ ಸಮಾಧಿಯ ಮೇಲಲ್ಲ ಎಂಬುದನ್ನೂ ಕಾಲಕಾಲಕ್ಕೆ ಸಾತ್ತ್ವಿಕ ಹೋರಾಟಗಳಿಂದ ಸ್ಪಷ್ಟಪಡಿಸುತ್ತಲೇ ಬರಲಾಗಿದೆ. ಇವೆಲ್ಲಕ್ಕೂ ಅಂತ್ಯ ಹಾಡುವ ಕಾಲ ಮಂಗಲಕರ ಸಂದರ್ಭಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ.
ಭವ್ಯ ಶ್ರೀರಾಮಮಂದಿರ ಕೇವಲ ಹಿಂದೂಗಳ ಶ್ರದ್ಧಾಕೇಂದ್ರವಲ್ಲ; ಅದು ಭಾರತದ ಅಸ್ಮಿತೆಯ ಪ್ರತೀಕ. ರಾಮನ ಜೀವನವೇ ಸೌಹಾರ್ದಕ್ಕೆ ಅತ್ಯುತ್ತಮ ಉದಾಹರಣೆ. ಈ ನೆಲದ ಗುಣವೇ ಅವನಲ್ಲಿ ವ್ಯಕ್ತವಾಗಿದೆ. ನೀತಿವಂತರಾದ ಎಲ್ಲರನ್ನೂ ಅವನು ಗೌರವಿಸಿದ. ರಾಕ್ಷಸನಾದರೂ ವಿಭೀಷಣನಿಗೆ ಪಟ್ಟ ಕಟ್ಟಿದ. ಹನುಮ, ಸುಗ್ರೀವಾದಿ ವಾನರರು ಆತನ ಆಪ್ತರು. ವನವಾಸಿ ಗುಹ ಆತ್ಮೀಯ ಮಿತ್ರ. ಕರಡಿಗಳ ನಾಯಕ ಜಾಂಬವಂತನನ್ನು ಮಾರ್ಗದರ್ಶಕನೆಂದು ಭಾವಿಸುತ್ತಿದ್ದ. ಪಕ್ಷಿಯಾದ ಜಟಾಯುವಿಗೆ ಪಿತೃಕಾರ್ಯಗಳನ್ನು ಮಾಡಿದ. ಹೀಗೆ ಮಾನವರೊಂದಿಗೆ ಮಾತ್ರವಲ್ಲ; ಸಕಲ ಪಶುಪ್ರಾಣಿ, ಪಕ್ಷಿಗಳೊಂದಿಗೂ ಸಮರಸದ, ಸೌಹಾರ್ದದ ಜೀವನ ಸಾಧ್ಯ ಎಂದು ನಿರೂಪಿಸಿದ. ಇಂತಹ ಮಹಾಪುರುಷನ ಜನ್ಮಸ್ಥಾನದಲ್ಲಿನ ಮಂದಿರವೂ ಸೌಹಾರ್ದದ ಆದರ್ಶವನ್ನು ಸಾರುವ ಕೇಂದ್ರವೇ ಆಗುವುದು.
Image may be NSFW.
Clik here to view. Image may be NSFW.
Clik here to view.
Image may be NSFW.
Clik here to view.