
ಕಲಬುರಗಿ: ರೋಗಗ್ರಸ್ತ, ನಿರಾಶ್ರಿತ ಹಾಗು ವಯಸ್ಸಾದ ಗೋವುಗಳ ಸೇವೆಯಲ್ಲಿ ತೊಡಗಿರುವ ಕಲಬುರಗಿಯ ಶ್ರೀ ಮಾಧವ ಗೋ ಶಾಲೆಗೆ ಪ್ರತಿಷ್ಠಿತ ಐಎಸ್ಒ ಪ್ರಮಾಣ ಪತ್ರ ದೊರಕಿದೆ. ಪ್ರತಿಷ್ಠಿತ ಸರ್ಟಿಫಿಕೇಟ್ ಪಡೆದ ರಾಜ್ಯದ 2ನೇ ಗೋಶಾಲೆ ಹೆಗ್ಗಳಿಕೆಗೆ
ಪಾತ್ರವಾಗಿದೆ.
ಗುಣಮಟ್ಟದ ಚಿಕಿತ್ಸೆ, ಸ್ವಚ್ಛತೆ, ಆರೈಕೆ, ಉಪಚಾರ, ದೇಸಿ ಗೋ ತಳಿಗಳ ಅಭಿವೃದ್ಧಿ ಮತ್ತು ಪಂಚಗವ್ಯ ಉತ್ಪನ್ನಗಳ ಸುವ್ಯವಸ್ಥಿತ ಆಡಳಿತ ಹಾಗೂ ಸಮರ್ಥ ನಿರ್ವಹಣೆಯನ್ನು ಪ್ರಮಾಣೀಕರಿಸಲು ಐ.ಎಸ್.ಓ. 9001-2015 ಪ್ರಮಾಣಪತ್ರ
ನೀಡಲಾಗುತ್ತದೆ. ಕಲಬುರಗಿಯ ಶ್ರೀ ಮಾಧವ ಗೋಶಾಲೆಯು ಈ ಪ್ರಮಾಣಪತ್ರವನ್ನು
ಪಡೆದಿರುವ ಕರ್ನಾಟಕದ 2ನೇ ಗೋಶಾಲೆ ಹಾಗೂ ISO 9001-2015 ಪ್ರಮಾಣಪತ್ರ ಪಡೆದಿರುವ ರಾಜ್ಯದ ಮೊದಲ ಗೋಶಾಲೆಯಾಗಿದೆ. ತೃತೀಯ ಸಂಸ್ಥೆಯ ಮೂಲಕ ಗೋಶಾಲೆಯ ಹಣಕಾಸು ನಿರ್ವಹಣೆ, ಆಡಳಿತ ಸೇರಿದಂತೆ ವ್ಯವಸ್ಥೆಯ ಗುಣಮಟ್ಟದ ಮೌಲ್ಯಮಾಪನ ಮಾಡಿಸಿ, ಅದರ ಶಿಫಾರಸ್ಸಿನ ಆಧಾರದ ಮೇಲೆ ಈ ಪ್ರಮಾಣ ಪತ್ರ ನೀಡಲಾಗುತ್ತದೆ.
ಗೋ ಸೇವೆಯ ಪಣತೊಟ್ಟ ಉಪನ್ಯಾಸಕ ಮಹೇಶ್ ಬೀದರ್ಕರ್: ಈ ಗೋಶಾಲೆಯ ಸ್ಥಾಪಕರು ಕಲಬುರಗಿ ನಗರದ ಕೈಲಾಸ ನಗರದ ನಿವಾಸಿಯಾದ ಮಹೇಶ್. ಅವರು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಎಂಸಿಸಿ, ಎಂ.ಫಿಲ್ ಪದವಿ ಮುಗಿಸಿ ಪ್ರಸ್ತುತ ಸೇಡಂನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಪನ್ಯಾಸದ ಜೊತೆಗೆ ಗೋಸೇವೆಯ ಪಣತೊಟ್ಟು ಕಲಬುರಗಿ ತಾಲೂಕಿನ ಕುಸನೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಮಾಧವ ಗೋಶಾಲೆ ಹೆಸರಿನಲ್ಲಿ ಗೋ ಸಂರಕ್ಷಣಾ ಕೇಂದ್ರ ಆರಂಭಿಸಿದ್ದಾರೆ. ವಯಸ್ಸಾದ, ಹಾಲು ಕೊಡದೇ ಇರುವಂತ ಗೋವುಗಳು, ಕೈಕಾಲು ಮುರಿದ ದನ-ಕರುಗಳಿಗೆ ಜೀವದಾತರಾಗಿದ್ದಾರೆ. ನಿರುಪಯುಕ್ತ ಎನ್ನುವ ಗೋವು, ದನ-ಕರುಗಳನ್ನು ತಂದು ತಮ್ಮ ಗೋ ಶಾಲೆಯಲ್ಲಿ ಅವುಗಳನ್ನು ಸಾಕುತ್ತಿದ್ದಾರೆ. ಅವುಗಳಿಗೆ ಮೇವು, ನೀರು ನೀಡಿ ಸಂರಕ್ಷಣೆ ಮಾಡುತ್ತಿರುವ ಮಹೇಶ್ ಅವುಗಳಿಗೆ ಚಿಕಿತ್ಸೆ ಕೂಡ ನೀಡುತ್ತಿದ್ದಾರೆ.
ಗೋ ಉತ್ಪನ್ನಗಳ ತಯಾರಿಕೆ: ಗೋವನ್ನು ಸಾಕುವುದು ಆರ್ಥಿಕವಾಗಿಯೂ ಲಾಭದಾಯಕ ಮತ್ತು ಹಾಲು ಮಾತ್ರವಲ್ಲದೇ ಗೋವಿನ ಇತರ ಉತ್ಪನ್ನಗಳನ್ನೂ ತಯಾರಿಸಿ ಜೀವನ ಹಾಗೂ ಸ್ವಾವಲಂಬಿ ಗೋಶಾಲೆ ನಡೆಸಬಹುದುಎಂಬುದಕ್ಕೆ ಉದಾಹರಣೆಯಾಗಿ ಮಾಧವ ಗೋಶಾಲೆ ನಿಂತಿದೆ.
ಗೋವುಗಳ ಸಗಣಿಯಿಂದ ವಿಭೂತಿ ತಯಾರಿಸಿ ಕಡಿಮೆ ಬೆಲೆಗೆ ರಾಜ್ಯದ ನಾನಾ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಗೋ ಮೂತ್ರದಿಂದ 3-4 ರೀತಿಯ ಕೀಟನಾಶಕಗಳನ್ನು ತಯಾರಿಸುವ ಮಹೇಶ್, ರೈತರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಕಾಮಧೇನು ಹಣತೆ ಮುಂತಾದ ಅನೇಕ ಗೋಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ಧಾರೆ.
The post ಉಪನ್ಯಾಸಕನ ಗೋಶಾಲೆಗೆ ಪ್ರತಿಷ್ಠಿತ ಐಎಸ್ಒ ಪ್ರಮಾಣ ಪತ್ರ first appeared on Vishwa Samvada Kendra.