Quantcast
Channel: News – Vishwa Samvada Kendra
Viewing all articles
Browse latest Browse all 1745

ಕೋವಿಡ್ ಎರಡನೆಯ ಅಲೆಯ ಭೀಕರತೆಯ ಬಗ್ಗೆ ಆರೆಸ್ಸೆಸ್ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರ ಸಂದೇಶ

$
0
0

ದೆಹಲಿ, ೨೪ ಏಪ್ರಿಲ್ ೨೦೨೧: ಕೋವಿಡ್ ಎರಡನೆಯ ಅಲೆಯ ಭೀಕರತೆಯ ಬಗ್ಗೆ ಆರೆಸ್ಸೆಸ್ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಸ್ವಯಂಸೇವಕರಿಗೆ, ಸಮಾಜಕ್ಕೆ ಸಂದೇಶವನ್ನು ನೀಡಿದ್ದಾರೆ. ಸಮಾಜದ ಕಷ್ಟಗಳಿಗೆ ಸ್ಪಂದಿಸುವ ಜೊತೆಗೆ, ಪಾಲಿಸಬೇಕಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ, ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ತಮ್ಮ ಸಂದೇಶದಲ್ಲಿ ದತ್ತಾತ್ರೇಯ ಹೊಸಬಾಳೆಯವರು ತಿಳಿಸಿದ್ದಾರೆ:

File picture of Dattatreya Hosabale, Sarkaryavah of RSS

ಸಂದೇಶ:

ಕೋವಿಡ್ ಮಹಾಮಾರಿಯು ಮತ್ತೊಮ್ಮೆ ನಮ್ಮ ದೇಶಕ್ಕೆ ಕಠಿಣ ಸವಾಲನ್ನು ಒಡ್ಡಿದೆ. ಕೊರೊನಾ ವೈರಸ್ ಹರಡುವ ವೇಗ ಮತ್ತು ತೀವ್ರತೆಯು ಈ ಸಮಯದಲ್ಲಿ ಹೆಚ್ಚು ಗಂಭೀರವಾಗಿದೆ. ಇಂದು ನಮ್ಮ ದೇಶದ ಹೆಚ್ಚಿನ ಭಾಗಗಳು ಅದರ ತೀವ್ರತೆಯನ್ನು ಅನುಭವಿಸುತ್ತಿವೆ. ಹೆಚ್ಚಿನ ಸಂಖ್ಯೆಯ ಜನರುಸೋಂಕಿಗೆ ಒಳಗಾಗಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ. ನೂರಾರು ಕುಟುಂಬಗಳು ಅವರ ಹತ್ತಿರದವರನ್ನು, ಆತ್ಮೀಯರನ್ನು ಕಳೆದುಕೊಂಡಿವೆ. ಕೋವಿಡ್19 ಸಾಂಕ್ರಾಮಿಕದಿಂದ ಸಂಕಷ್ಟ ಅನುಭವಿಸಿರುವ ಕುಟುಂಬಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಂತಾಪ ವ್ಯಕ್ತಪಡಿಸುತ್ತದೆ. 

ಪರಿಸ್ಥಿತಿ ಚಿಂತಾಜನಕವಾಗಿದ್ದರೂ, ಸಮಾಜದ ಶಕ್ತಿಯು ಅಗಾಧವಾಗಿದೆ. ಬಿಕ್ಕಟ್ಟನ್ನು ಎದುರಿಸುವ ನಮ್ಮ ಸಾಮರ್ಥ್ಯವು ಪ್ರಪಂಚಕ್ಕೆಲ್ಲ ಚಿರಪರಿಚಿತವಾಗಿದೆ. ಇಂತಹ ಕಠಿಣ ಪರಿಸ್ಥಿತಿಯನ್ನು ತಾಳ್ಮೆ, ಸಂಯಮ, ಶಿಸ್ತಿನ ಪಾಲನೆ, ಪರಸ್ಪರ ಸಹಕಾರ, ಬೆಂಬಲದೊಂದಿಗೆ ಖಂಡಿತವಾಗಿಯೂ ಎದುರಿಸುತ್ತೇವೆ ಎಂಬುದು ನಮ್ಮ ದೃಢವಾದ ನಂಬಿಕೆ. 

ಹಠಾತ್ತನೆ ಹರಡಿದ ಸಾಂಕ್ರಾಮಿಕ ರೋಗದಿಂದಾಗಿ ಸದ್ಯದ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಜನರು ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ ಮತ್ತು ಅಗತ್ಯ ಔಷಧಿಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಭಾರತದಂತಹ ದೊಡ್ಡ ದೇಶದಲ್ಲಿ ಸಮಸ್ಯೆಗಳೂ ದೈತ್ಯಾಕಾರದವನ್ನೇ ಪಡೆಯುತ್ತವೆ. ಈ ಸವಾಲುಗಳನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಸಂಸ್ಥೆಗಳು ವ್ಯಾಪಕ ಪ್ರಯತ್ನಗಳನ್ನು ನಡೆಸಿವೆ. ಹಿಂದಿನಂತೆಯೇ, ವೈದ್ಯಕೀಯ ಕ್ಷೇತ್ರದಲ್ಲಿನ ಎಲ್ಲರೂ, ಭದ್ರತಾ ಸಿಬ್ಬಂದಿಗಳು, ಸ್ವಚ್ಛತಾಕರ್ಮಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಸಮಾಜಕ್ಕೆ ಸಹಾಯವಾಗಲೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಎಂದಿನಂತೆ ಸೇವಾ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಪ್ರಸ್ತುತ ಸವಾಲಿನ ಗಂಭೀರತೆಯನ್ನು ಗುರುತಿಸಿ ದೇಶದ ಜನತೆ, ಹಲವು ಸಾಮಾಜಿಕ, ಧಾರ್ಮಿಕ ಸಂಸ್ಥೆಗಳು ಸ್ವಯಂಪ್ರೇರಣೆಯಿಂದ ಎಲ್ಲಾ ರೀತಿಯ ಪ್ರಯತ್ನಗಳಲ್ಲಿ ಭಾಗಿಯಾಗಿವೆ.

ಈ ಪ್ರತಿಕೂಲ ಪರಿಸ್ಥಿತಿಯನ್ನು ಸಮಾಜದಲ್ಲಿನ ವಿನಾಶಕಾರಿ ಮತ್ತು ಭಾರತ ವಿರೋಧಿ ಶಕ್ತಿಗಳು ತಮ್ಮ ಅನುಕೂಲಕ್ಕಾಗಿ ಬಳಸಿಕೊಂಡು ದೇಶದಲ್ಲಿ ನಕಾರಾತ್ಮಕ, ಅಪನಂಬಿಕೆಯ ವಾತಾವರಣವನ್ನು ಸೃಷ್ಟಿಸುವ ಸಾಧ್ಯತೆಗಳಿವೆ. ದೇಶವಾಸಿಗಳು ಸಮಸ್ಯೆಗಳನ್ನು ಪರಿಹರಿಸಲು ತೆಗೆದುಕೊಳ್ಳುತ್ತಿರುವ ಕ್ರಮದ ಜೊತೆಗೆ ಈ ವಿನಾಶಕಾರಿ ಪಡೆಯ ಪಿತೂರಿಗಳ ಬಗ್ಗೆಯೂ ಜಾಗರೂಕರಾಗಿರಬೇಕು.

 ಸಮಾಜದ ಕೊರತೆಗಳನ್ನು ನೀಗಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಸ್ವಯಂಸೇವಕರಿಗೆ ಸೂಚನೆ ನೀಡುತ್ತಾ, ದೇಶದ ನಾಗರಿಕರು, ಸಾಮಾಜಿಕ, ಧಾರ್ಮಿಕ, ಸೇವಾ ಸಂಸ್ಥೆಗಳು, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದವರನ್ನು ವಿನಮ್ರವಾಗಿ ಪ್ರಾರ್ಥಿಸುತ್ತಾ, ತಕ್ಷಣ ಕಾರ್ಯಪ್ರವೃತ್ತರಾಗುವ ಮನೋಭಾವದೊಂದಿಗೆ ಪ್ರಸ್ತುತ ಸವಾಲುಗಳನ್ನು ಪರಿಹರಿಸಲು ಮುಂದೆ ಬರುವಂತೆ ಮನವಿ ಮಾಡುತ್ತದೆ. 

ಪ್ರಸ್ತುತ ಪರಿಸ್ಥಿತಿಯನ್ನು ಮನದಲ್ಲಿಟ್ಟುಕೊಂಡು ಕೆಳಕಂಡ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ.

 – ಆರೋಗ್ಯ, ಶಿಸ್ತಿಗೆ ಸಂಬಂಧಿಸಿದ ಕಾನೂನುಗಳನ್ನು ಪಾಲನೆ ಮಾಡಲೇಬೇಕು. ಕೊರೋನಾ ಸೇವಾ ಚಟುವಟಿಕೆಗಳಲ್ಲಿ ತೊಡಗಿರುವವರೂ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. 

– ಮುಖ ಕವಚ (ಮಾಸ್ಕ್) ಧರಿಸುವ, ಆರೋಗ್ಯ ಕಾಪಾಡಿಕೊಳ್ಳುವ, ದೈಹಿಕ ಅಂತರ, ಖಾಸಗಿ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಜನರು ಸೇರದ ಬಗ್ಗೆ, ಕರ್ಫ್ಯೂ ನಿಯಮಪಾಲನೆ, ಆಯುರ್ವೇದದ ಕಷಾಯ ಸೇವಿಸುವ, ಬಿಸಿ ಹಬೆ ತೆಗೆದುಕೊಳ್ಳುವ, ವ್ಯಾಕ್ಸಿನೇಷನ್ ನಂತಹ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಕೊಳ್ಳುವುದು ಸೂಕ್ತ.

 – ಅನಿವಾರ್ಯವಿದ್ದಾಗ ಮಾತ್ರವೇ ಮನೆಯಿಂದ ಹೊರಗೆ ಹೋಗುವುದು ಸೂಕ್ತ.

 – ಆಡಳಿತವರ್ಗ, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಮತ್ತು ಸ್ವಚ್ಛತಾಕರ್ಮಿಗಳ ಜೊತೆ ಸಂಪೂರ್ಣ ಸಹಕಾರ ಅತ್ಯಗತ್ಯ.

 – ಮಾಧ್ಯಮ ಕ್ಷೇತ್ರ ಸೇರಿದಂತೆ, ಸಮಾಜದ ಎಲ್ಲ ವರ್ಗದವರು ಸಕಾರಾತ್ಮಕತೆಯ, ನಂಬಿಕೆ, ಭರವಸೆಯ ವಾತಾವರಣವನ್ನು ಮೂಡಿಸುವಲ್ಲಿ ಸಹಕರಿಸಬೇಕು. 

– ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವವರು ಸಕಾರಾತ್ಮಕ ವಾತಾವರಣವನ್ನು ನಿರ್ಮಿಸುವಲ್ಲಿ ಸಂಯಮ ಮತ್ತು ಜಾಗರೂಕತೆಯಿಂದ ಕೆಲಸ ಮಾಡಬೇಕಿದೆ.


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>