“ಧರ್ಮ ಸಂರಕ್ಷಕ ಕೃಷ್ಣ” ಪುಸ್ತಕದ ಬಿಡುಗಡೆ ಸಮಾರಂಭ
ದಿನಾಂಕ: 22 ಆಗಸ್ಟ್ 2021: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಶ್ರೀ ಕಾ. ಶ್ರೀ. ನಾಗರಾಜ್ ರವರ ರಚನೆಯ “ಧರ್ಮ ಸಂರಕ್ಷಕ ಶ್ರೀ ಕೃಷ್ಣ” ಪುಸ್ತಕವನ್ನು ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯ ಅವರು ಲೋಕಾರ್ಪಣೆ ಮಾಡಿದರು.
ಜಯನಗರದ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ನಡೆದ ಸರಳ ಸಮಾರಂಭವೊಂದರಲ್ಲಿ ಪುಸ್ತಕವನ್ನು ಬಿಡುಗಡೆ ಗೊಳಿಸಿ, ತೇಜಸ್ವಿ ಸೂರ್ಯ ಅವರು ಆತ್ಮ ರಕ್ಷಣೆಯಲ್ಲಿ ಶ್ರೀ ಕೃಷ್ಣನ ಪ್ರೇರಣೆಯ ಬಗ್ಗೆ ವಿವರಿಸುತ್ತಾ ಶಕ್ತಿ ಸಾಮರ್ಥ್ಯಗಳ ಜೊತೆ ನಿಸ್ವಾರ್ಥತೆ ಮುಖ್ಯ ಎಂಬುದು ಅರಿಯಬಹುದು ಎಂದು ಆರ್ಥೈಸಿದರು. ಸಮಾಜದಲ್ಲಿ ಆದರ್ಶ ನಾಗರಿಕರಿಗೆ ಶ್ರೀ ಕೃಷ್ಣನೇ ಮಾರ್ಗದರ್ಶಕ ಎಂದು ಅಭಿಪ್ರಾಯಪಡುತ್ತಾ ಸಮಾಜದಲ್ಲಿ ವಿಚಾರ ನಿಷ್ಠೆಗೆ ಮಹತ್ವ ಇರಬೇಕೇ ಹೊರತು ವ್ಯಕ್ತಿಗಲ್ಲ ಎಂದು ತಿಳಿಸಿದರು. ಶ್ರೇಷ್ಠ ನಾಯಕರಲ್ಲಿ ಹಾಗೂ ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಇರಬೇಕಾದ ಮುಖ್ಯ ಗುಣಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿ, ಪ್ರೇರೇಪಿಸುವ ಕೌಶಲ್ಯ, ಧ್ಯೇಯನಿಷ್ಠೆ, ಸ್ವಾರ್ಥರಹಿತ ಪರಿಶ್ರಮದ ಬದುಕು ಎಂಬುದನ್ನು ಶ್ರೀ ಕೃಷ್ಣನಿಂದ ಕಲಿಯಬೇಕಾದ ಮುಖ್ಯ ವಿಚಾರಗಳು ಎಂದರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಸರಣಿ ಪುರಸ್ಕೃತರು ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ರೀ ಪಿ. ಶೇಷಾದ್ರಿ ಅವರು ಪಾಲ್ಗೊಂಡು ಶ್ರೀ ಕೃಷ್ಣನು ಚೈತನ್ಯ ಸ್ವರೂಪ, ಆತ್ಮವಿಶ್ವಾಸದ ಸಂಕೇತ, ಭಾರತೀಯ ಸಂಸ್ಕೃತಿಯಲ್ಲಿ ಮುಖ್ಯ ಪಾತ್ರ ಎಂದು ತಿಳಿಸುತ್ತಾ ಈ ಪುಸ್ತಕವು ಭಗವದ್ಗೀತೆಯಷ್ಟು ಸಾರ ಹೊಂದಿದೆ ಎಂದು ಅಭಿಪ್ರಾಯಪಟ್ಟರು. ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಜಯವಾಣಿಯ ಸಂಪಾದಕರು ಕೆ. ಎನ್. ಚೆನ್ನೆಗೌಡ ಅವರು ಪುಸ್ತಕದ ಮಹತ್ವವನ್ನು ಹೇಳುತ್ತಾ ಶ್ರೀ ಕೃಷ್ಣನ ಆದರ್ಶಗಳು ಇಂದಿನ ದಿನಗಳಲ್ಲಿ ಮುಖ್ಯ ಹಾಗೂ ಈ ಪುಸ್ತಕ ಸಮಾಜಕ್ಕೆ ಮಾರ್ಗ ದರ್ಶನ ನೀಡಲಿ ಎಂದರು.
ಈ ಪುಸ್ತಕವನ್ನು ಪ್ರಕಾಶಿಸಿದವರು ಶ್ರೀ ಎಸ್. ಎಸ್. ಶ್ರೀನಾಥ್.
ಕಾ. ಶ್ರೀ. ನಾಗರಾಜ್ ಅವರು ಸಾಂಸ್ಕೃತಿಕ ಹಾಗೂ ರಾಷ್ಟ್ರಭಕ್ತಿ ವಿಚಾರಗಳಲ್ಲಿ 100ಕ್ಕೂ ಹೆಚ್ಚು ಪುಸ್ತಕಗಳನ್ನು ಈ ವರೆಗೂ ಬರೆದಿರುತ್ತಾರೆ.
ಕೋವಿಡ್ ನಿಯಮಾವಳಿಗಳ ಹಿನ್ನೆಲೆಯಲ್ಲಿ ಸೀಮಿತ ಆಹ್ವಾನಿತರೊಂದಿಗೆ ನಡೆದ ಸಮಾರಂಭವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಯಿತು.

