
ಕರ್ನಾಟಕ: ಬಳ್ಳಾರಿ ನಗರದ ಹರಿಶ್ಚಂದ್ರ ನಗರ ಸೇವಾ ಬಸತಿಗೆ ಇಂದು (30/1/21) ಪೇಜಾವರ ಮಠದ ಪೂಜ್ಯ ಶ್ರೀಗಳು, ಅಯೋಧ್ಯಾ ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ನ ದಕ್ಷಿಣ ಭಾರತದ ಏಕೈಕ ಪ್ರತಿನಿಧಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ*ಅವರು ಆಗಮಿಸಿದ್ದರು.

ಹರಿಶ್ಚಂದ್ರ ನಗರ ಉಪೇಕ್ಷಿತ ಬಂಧುಗಳ ವಸತಿಯಾಗಿದ್ದು, ಇಡೀ ವಸತಿಯವರು ಸ್ವಾಮೀಜಿಯವರನ್ನು ಭಕ್ತಿಪೂರ್ವಕ ಹಾಗೂ ಆದರದಿಂದ ಸ್ವಾಗತಿಸಿದರು. ಐದು ಮನೆಗಳಲ್ಲಿ ಪಾದಪೂಜೆ ನಡೆಯಿತು. ಕ್ರಿಶ್ಚಿಯನ್ ಹಾಗೂ ಮುಸಲ್ಮಾನರೂ ಸೇರಿದಂತೆ ಸ್ವಾಮಿಜಿಗಳನ್ನು ಸ್ವಾಗತಿಸಿದ್ದು ವಿಶೇಷ. ಸ್ವಾಮೀಜಿಗಳ ಪಾದಾಯಾತ್ರೆ ಉದ್ದಕ್ಕೂ ರಂಗೋಲಿ ಅಲಂಕಾರ, ಪುಷ್ಪಾರ್ಚನೆ, ಮಾತೆಯರಿಂದ ಪೂರ್ಣಕುಂಭ, ವಾದ್ಯ ಮೇಳ, ತಳಿರು ತೋರಣ ಇತ್ಯಾದಿಗಳು ಹಬ್ಬದ ವಾತಾವರಣವನ್ನು ಸೃಷ್ಟಿಸಿತು.
ಪಾದಯಾತ್ರೆ, ಪಾದಪೂಜೆ ನಂತರ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಅವರು ಮಾತನಾಡುತ್ತ, ಇದು ರಾಮೋತ್ಸವದ ಹಾಗಿದೆ ಎಂದು ಬಣ್ಣಿಸಿದರು. ಅಯೋಧ್ಯಾ ರಾಮ ಮಂದಿರಕ್ಕೆ ಭಕ್ತಿಪೂರ್ವಕವಾಗಿ ಎಷ್ಟು ಸಮರ್ಪಿಸಿದರು ಅದು ರಾಮನಿಗೆ ಸಲ್ಲುತ್ತದೆ. ರಾಮಮಂದಿರ ನಿರ್ಮಾಣದ ನಂತರ ನಮ್ಮ ಕೆಲಸ ಮುಗಿಯುವುದಿಲ್ಲ. ನಿತ್ಯ ಮನೆಯಲ್ಲಿ ರಾಮನ ಭಜನೆ ಮಾಡುವ ಮೂಲಕ ಸನಾತನ ಸಂಸ್ಕೃತಿಯನ್ನು ಉಳಿಸಬೇಕು ಎಂದು ಹೇಳಿದರು.

ನಗರ ಶಾಸಕ ಶ್ರೀ ಸೋಮಶೇಖರ ರೆಡ್ಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಟಿ. ಪ್ರಸನ್ನ, ಶ್ರೀ ನರೇಶ ಚಿರಾನಿಯಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯರು ನಗರದ ಪಾಲಿಕೆ ಸದಸ್ಯರು ಮತ್ತು ಭಾಜಪ ಕಾರ್ಯಕರ್ತರು, ಹಿಂದೂ ಜಾಗರಣಾ ವೇದಿಕೆ, ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕರ್ತೆಯರು ಸೇರಿದಂತೆ 117 ಪುರುಷರು, 88 ಮಾತೆಯರು ಒಟ್ಟು 205 ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು