ಬೆಂಗಳೂರು, 7 ಫೆಬ್ರವರಿ: ಬೆಂಗಳೂರು ಮಹಾನಗರದ ಗಿರಿನಗರದಲ್ಲಿ ನಿನ್ನೆ ರಕ್ತದಾನ ಶಿಬಿರ ನಡೆಯಿತು. ಜನನಿ ಸೇವಾ ಸಂಸ್ಥೆ, ಸಂಸ್ಕೃತ ಭಾರತಿ, ಹಿಂದೂ ಸೇವಾ ಪ್ರತಿಷ್ಠಾನ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘಗಳು ಜತೆಗೂಡಿ ಆಯೋಜಿಸಿದ್ದ ಈ ಶಿಬಿರದಲ್ಲಿ 138 ಜನ ದಾನಿಗಳು ರಕ್ತದಾನ ಮಾಡಿದರು. ರಾಷ್ಟ್ರೋತ್ಥಾನ ರಕ್ತನಿಧಿ ರಕ್ತ ಸಂಗ್ರಹಿಸಿತು.

ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ರಾಷ್ಟ್ರೋತ್ಥಾನ ರಕ್ತನಿಧಿಯಂತಹ ಸಂಸ್ಥೆಗಳು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು. ತಲಸ್ಸೇಮಿಯಾ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ಬ್ಲಡ್ ಟ್ರಾನ್ಸ್ ಫ್ಯೂಶನ್ ಮಾಡಲು ರಾಷ್ಟ್ರೋತ್ಥಾನ ರಕ್ತನಿಧಿ ಪ್ರಾರಂಭಿಸಿರುವ ಸಂರಕ್ಷಾ ಪ್ರಕಲ್ಪದಿಂದ ನೂರಾರು ಮಕ್ಕಳು ಪ್ರಯೋಜನ ಪಡೆಯುತ್ತಿದ್ದು, ಇಂತಹ ಕೆಲಸಕ್ಕೆ ತಮ್ಮ ಸಹಕಾರ ಸದಾ ಇರಲಿದೆ ಎಂದರು.
ಆರೆಸ್ಸೆಸ್ ನ ಬೆಂಗಳೂರು ದಕ್ಷಿಣ ವಿಭಾಗದ ಸೇವಾ ಪ್ರಮುಖ್ ಗುರುರಾಜ್ ಕುಲಕರ್ಣಿ ಮಾತನಾಡಿ ಕೋವಿಡ್ 19 ರ ಸಂದರ್ಭದಲ್ಲಿ ಎಲ್ಲೆಡೆ ಲಾಕ್ ಡೌನ್ ಇದ್ದರೂ ಆರೆಸ್ಸೆಸ್ಸಿನ ಸ್ವಯಂಸೇವಕರು ರಾಜ್ಯಾದ್ಯಂತ ರಕ್ತದಾನ ಶಿಬಿರಗಳನ್ನು ಆಯೋಜಿಸಿ ತುರ್ತು ಅಗತ್ಯವಿರುವ ರೋಗಿಗಳಿಗೆ ರಕ್ತ ಸಿಗುವಂತೆ ನೋಡಿಕೊಂಡಿದ್ದಾರೆ. ಸಂಘದ ಶಾಖೆಯಲ್ಲಿನ ಸಂಸ್ಕಾರದಿಂದಾಗಿ ಸ್ವಯಂಸೇವಕರು ಸಮಾಜಸೇವೆಗೆ ಸದಾ ಸಿದ್ಧರಾಗಿರುತ್ತಾರೆ. ಮನೆಪಾಠ, ಭಜನೆ, ಸ್ಲಮ್ ಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ, ಮಕ್ಕಳಿಗಾಗಿ ಜೋಳಿಗೆ ಪುಸ್ತಕಾಲಯ ಮೊದಲಾದ ಪ್ರಕಲ್ಪಗಳನ್ನು ಸಂಘದ ಸ್ವಯಂಸೇವಕರು ನಡೆಸುತ್ತದ್ದಾರೆ. ಆರೆಸ್ಸೆಸ್ ಎನ್ನುವುದು ಕೇವಲ ಒಂದು ಸಂಸ್ಥೆಯಲ್ಲ. ಅದೊಂದು ಸಮಾಜಸೇವೆಯ ಆಂದೋಲನ. ಈ ಆಂದೋಲನದಲ್ಲಿ ಸಂಪೂರ್ಣ ಸಮಾಜ ಭಾಗವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿಂದೂ ಸೇವಾ ಪ್ರತಿಷ್ಠಾನದ ನಿರ್ದೇಶಕ ಸುರೇಶ್, ಸಂಸ್ಕೃತ ಭಾರತಿಯ ಸಂಘಟನಾ ಕಾರ್ಯದರ್ಶಿ ನಾಗರಾಜ್, ಜನನಿ ಸೇವಾ ಸಂಸ್ಥೆಯ ರಾಘವೇಂದ್ರ ಹಂದೆ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
