
ಪಶ್ಚಿಮ ಬಂಗಾಳದ ಚುನಾವಣೆ ನಡೆಯುತ್ತಿದ್ದು, ಆಢಳಿತದಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹತಾಶೆಯ ಇನ್ನೊಂದು ಮಗ್ಗುಲು ತಲಪಿದೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ. ವಿರೋಧಿ ಪಕ್ಷ ಎಂಬ ಕಾರಣಕ್ಕೆ ಬಿಜೆಪಿ ಮುಖಂಡ, ಕಾರ್ಯಕರ್ತರ ಹತ್ಯೆಗಳು ನಿರಂತರವಾಗಿ ನಡೆಯುತ್ತಿದ್ದು, ಇದೀಗ 85 ವರ್ಷದ ವೃದ್ಧೆಯನ್ನು ಹತ್ಯೆ ಮಾಡಿದ್ದಾರೆ.
ಬಿಜೆಪಿ ನಾಯಕ ಗೋಪಾಲ್ ಮಜುಂದಾರ್ ಅವರ 85 ವರ್ಷದ ತಾಯಿ ಶೋವಾ ಮಜುಂದಾರ್ ಅವರು ತೃಣಮೂಲ ಕಾಂಗ್ರೆಸ್ ಗೂಂಡಾಗಳು ನಡೆಸಿದ ಹಲ್ಲೆಯಿಂದಾಗಿ ಇಂದು ಸೋಮವಾರ (ಮಾರ್ಚ್ 29) ಮುಂಜಾನೆ ನಿಧನರಾಗಿದ್ದಾರೆ. ಇವರು ಮಾರ್ಚ್ 25 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ನಾಲ್ಕು ದಿನಗಳ ನಂತರ ನಿಧನರಾಗಿದ್ದಾರೆ.
ಫೆಬ್ರವರಿ 27 ರ ಬೆಳಿಗ್ಗೆ ಟಿಎಂಸಿ ಕಾರ್ಯಕರ್ತರ ಗುಂಪೊಂದು ಅವರ ಮನೆಗೆ ನುಗ್ಗಿ ಅವರನ್ನು ನೆಲಕ್ಕೆ ತಳ್ಳಿ ಮುಖಕ್ಕೆ ಹೊಡೆದಿದ್ದರು. ದಾಳಿಕೋರರು ಬೆದರಿಕೆಯನ್ನು ಹಾಕಿ ಘಟನೆಯ ಬಗ್ಗೆ ಬಾಯಿ ಬಿಡದಂತೆ ಮತ್ತು ಪೊಲೀಸರಿಗೆ ತಿಳಿಸದಂತೆ ಬೆದರಿಕೆ ಹಾಕಿದ್ದರು. ಗೋಪಾಲ್ ಮತ್ತು ಅವರ ತಾಯಿ ನೀಡಿದ ದೂರುಗಳ ಆಧಾರದ ಮೇಲೆ ಗೂಂಡಾಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ವಯಸ್ಸಾದ ಮಹಿಳೆಯ ದುರಂತ ಸಾವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲ್ವಿಯಾ ಸೋಮವಾರ ಟ್ವೀಟ್ ಮಾಡಿದ್ದು, “ಈ ಬಂಗಾಳದ ಮಗಳು ಮೃತಪಟ್ಟಿದ್ದಾಳೆ. ಅವಳ ಮೇಲೆ ಟಿಎಂಸಿ ಕಾರ್ಯಕರ್ತರು ಕ್ರೂರವಾಗಿ ಹಲ್ಲೆ ಮಾಡಿದ್ದರು. ಆದರೆ ಮಮತಾ ಬ್ಯಾನರ್ಜಿ ಈಕೆಯ ಬಗ್ಗೆ ಸಹಾನುಭೂತಿಯ ಮಾತುಗಳನ್ನು ಆಡಿಲ್ಲ, ಅವಳ ಕುಟುಂಬಕ್ಕಾದ ಗಾಯಗಳನ್ನು ಯಾರು ಗುಣಪಡಿಸುತ್ತಾರೆ?. ಟಿಎಂಸಿಯ ಹಿಂಸಾಚಾರದ ರಾಜಕೀಯವು ಬಂಗಾಳದ ಆತ್ಮವನ್ನು ಗಾಯಗೊಳಿಸಿದೆ” ಎಂದಿದ್ದಾರೆ.
ಶೋವಾ ಅವರ ನಿಧನದ ಬಗ್ಗೆ ಗೃಹ ಸಚಿವ ಅಮಿತ್ ಶಾ ಕೂಡ ದುಃಖ ವ್ಯಕ್ತಪಡಿಸಿದ್ದಾರೆ. “ಟಿಎಂಸಿ ಗೂಂಡಾಗಳಿಂದ ಕ್ರೂರವಾಗಿ ಥಳಿಸಲ್ಪಟ್ಟ ಬಂಗಾಳದ ಮಗಳು ಶೋವಾ ಮಜುಂದಾರ್ ಜಿ ಅವರ ನಿಧನದ ಬಗ್ಗೆ ದುಃಖವಾಗಿದೆ. ಅವರ ಕುಟುಂಬದ ನೋವು ಮತ್ತು ಗಾಯಗಳು ಮಮತಾ ದೀದಿಯನ್ನು ದೀರ್ಘಕಾಲ ಕಾಡುತ್ತವೆ. ಬಂಗಾಳ ಹಿಂಸಾಚಾರ ರಹಿತ ನಾಳೆಗಾಗಿ ಹೋರಾಡಲಿದೆ, ಬಂಗಾಳ ನಮ್ಮ ಸಹೋದರಿಯರು ಮತ್ತು ತಾಯಂದಿರ ಸುರಕ್ಷಿತಕ್ಕಾಗಿ ಹೋರಾಡಲಿದೆ”ಎಂದು ಶಾ ಟ್ವೀಟ್ ಮಾಡಿದ್ದಾರೆ.