Clik here to view.

ಬೆಂಗಳೂರು: ರಾಜ್ಯದ 3.2 ಲಕ್ಷ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಉದ್ದೇಶದಿಂದ ಏ.2 ರಿಂದ ಓದು-ಬರಹ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಓದು-ಬರಹ ಅಭಿಯಾನವು ಏ.2ರಿಂದ ಮೇ ವರೆಗೆ ಹಮ್ಮಿಕೊಳ್ಳಲಾಗುತ್ತಿದೆ. 15 ರಿಂದ 50 ವರ್ಷದ 2.4 ಲಕ್ಷ ಮಹಿಳೆಯರು ಮತ್ತು 80,000 ಪುರುಷ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಗುರಿ ಹೊಂದಲಾಗಿದೆ. ಕಲಿಕೆ ಪೂರ್ಣಗೊಂಡ ಬಳಿಕ ಪ್ರತಿಯೊಬ್ಬರಿಗೂ ಪರೀಕ್ಷೆ ನಡೆಸಿ ಇಲಾಖೆಯಿಂದ ಸಾಕ್ಷರತಾ ಪ್ರಮಾಣ ಪತ್ರ ನೀಡಲಾಗುವುದು. ಪ್ರಮುಖವಾಗಿ ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಈ ಅಭಿಯಾನ ನಡೆಯಲಿದೆ ಎಂದರು.
ರಾಜ್ಯದಲ್ಲಿ ಒಟ್ಟು 1.26 ಕೋಟಿ ಅನಕ್ಷರಸ್ಥರನ್ನು ಗುರುತಿಸಲಾಗಿದ್ದು, ಈಗಾಗಲೇ 57 ಲಕ್ಷ ಜನರನ್ನು ಸಾಕ್ಷರರನ್ನಾಗಿಸಲಾಗಿದೆ. ಹಂತ ಹಂತವಾಗಿ ಉಳಿದವರನ್ನು ಅಕ್ಷರಸ್ಥರನ್ನಾಗಿಸಲಾಗುವುದು ಎಂದರು.