
ಉಡುಪಿಯ ಕಲ್ಸಂಕದ ಭಾರತ್ ಪ್ರೆಸ್ ಮಾಲಿಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ಶ್ರೀ ತೋನ್ಸೆ ದೇವದಾಸ್ ಪೈ ಇಂದು ಮಧ್ಯಾಹ್ನ 3:15ಕ್ಕೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಸಾಮಾಜಿಕ, ರಾಜಕೀಯ, ಧಾರ್ಮಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಉಡುಪಿ ನಗರ ಸಭೆಗೆ 1962ರಲ್ಲಿ ಜನಸಂಘದಿಂದ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಆಯ್ಕೆಯಾದ ನಗರಸಭಾ ಸದಸ್ಯರು. ಉಡುಪಿಯ ಸಾರ್ವಜನಿಕ ಗಣೇಶೋತ್ಸವ ಪ್ರಾರಂಭಿಸುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಮೊದಲ ಗಣೇಶೋತ್ಸವ ಆಚರಿಸಿದ್ದು ಭಾರತ್ ಪ್ರೆಸ್ಸಿನ ಮಾಳಿಗೆಯಲ್ಲಿ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಹಳೆ ಪತ್ರಿಕೆ ಅವರ ಮುದ್ರಣಾಲಯದಲ್ಲೂ ಮುದ್ರಿತವಾಗುತ್ತಿತ್ತು. ತುರ್ತು ಪರಿಸ್ಥಿತಿಯಲ್ಲಿ ಸೆರೆಮನೆವಾಸ ಅನುಭವಿಸಿದ್ದರು. ತಮ್ಮ ತೋನ್ಸೆ ಕುಟುಂಬದಲ್ಲಿ ಟ್ರಸ್ಟ್ ಸ್ಥಾಪಿಸಿ, ಕಳೆದ 20 ವರ್ಷಗಳಿಂದ ಪ್ರತಿ ತಿಂಗಳು ಸತ್ಯನಾರಾಯಣ ಪೂಜೆಯನ್ನು ನಡೆಸುತ್ತಾ ಕುಟುಂಬವನ್ನು ಒಗ್ಗೂಡಿಸಲು ಶ್ರಮಿಸಿದ್ದರು.ಕಲ್ಯಾಣಪುರ, ಭದ್ರಗಿರಿ, ಬಸರೂರಿನಲ್ಲಿ ದೇವಸ್ಥಾನ ಗಳ ಜೀರ್ಣೋದ್ಧಾರದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಅವರ ನಿಧನಕ್ಕೆ ಪ್ರಾಂತ ಸಂಘಚಾಲಕ ಡಾ. ವಾಮನ ಶೆಣೈ, ಮಂಗಳೂರು ವಿಭಾಗದ ಸಂಘಚಾಲಕ್ ಶ್ರೀ ಗೋಪಾಲ ಚೆಟ್ಟಿಯಾರ್, ಉಡುಪಿ ಜಿಲ್ಲಾ ಸಂಘಚಾಲಕ್ ಡಾ. ನಾರಾಯಣ ಶೆಣೈಯವರು ಸಂತಾಪ ಸೂಚಿಸಿದ್ದಾರೆ.